ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ಮೈಸೂರು ಮಲ್ಲಿಗೆ ಕವನ ಸಂಕಲನ ಆಧಾರಿತ ಚಿತ್ರವೊಂದು ದಶಕಗಳ ಹಿಂದೆ ಬಂದಿತ್ತು. ಈಗ ಅದೇ ಹೆಸರಿನಲ್ಲಿ ಮತ್ತೊಂದು ಕನ್ನಡ ಚಿತ್ರ ಇದೇ ತಿಂಗಳ ೫ ರಂದು ಸೆಟ್ಟೇರುತ್ತಿದೆ. ಆದರೆ ಇದು ಒಂಟಿ ಹೆಣ್ಣಿನ ಮೇಲೆ ಪ್ರತಿನಿತ್ಯ ನಡೆಯುತ್ತಿರುವ ವಿಲಕ್ಷಣ ಶೋಷಣೆಯ ಕಥೆ ಹೊಂದಿದೆ. ಚಿತ್ರವು ಮೈಸೂರ್, ಶ್ರೀರಂಗಪಟ್ಟಣ, ನಂಜನಗೂಡು, ಕೆ.ಆರ್.ಪೇಟೆ, ಸುತ್ತಮುತ್ತ ೨೫ ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ.
ಈ ಹಿಂದೆ ಆಸ್ಕರ್ ಎಂಬ ವಿನೂತನ ಶೈಲಿಯ ಚಿತ್ರ ನಿರ್ದೇಶಿಸಿದ್ದ ಆಸ್ಕರ್ ಕೃಷ್ಣ ಮೈಸೂರು ಮಲ್ಲಿಗೆ ಚಿತ್ರಕ್ಕೆ, ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶಿಸುವುದರೊಂದಿಗೆ ನಿರ್ಮಾಣದ ಜವಾಬ್ದಾರಿಯನ್ನು ಕೂಡ ಹೊತ್ತಿದ್ದಾರೆ. ಸೀತಾ ಧಾರಾವಾಹಿಯಲ್ಲಿ ನಟಿಸಿದ್ದ ರಂಜನ್ಶೆಟ್ಟಿ ಹಾಗೂ ಅಮೃತ ವರ್ಷಿಣಿ ಧಾರವಾಹಿ ನಟ ಶ್ರೀ ನಾಯಕರಾಗಿ ನಟಿಸುತ್ತಿದ್ದು, ಗಾಳಿ ಚಿತ್ರದ ನಟಿ ರೂಪ ನಟರಾಜ್ ನಾಯಕಿ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿತ್ರಕಥೆ ಸೂರ್ಯಕಾಂತ್ ಛಾಯಾಗ್ರಹಣ, ಎಸ್.ನಾಗು ಸಂಗೀತವಿದ್ದು, ರಘುನಂದನ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.